Sunday 1 August 2010

ತಿರುಕ್ಕುಱಳ್: ಅಧ್ಯಾಯ 39-48



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಅರ್ಥ ಭಾಗ: ಅಧ್ಯಾಯ: 39-48

ಅಧ್ಯಾಯ 39. ಅರಸನ ಹಿರಿವು


381. ಪಡೆ, ಜನತೆ, ಸಂಪತ್ತು, ಮಂತ್ರಿ, ಕೆಳೆ ಮತ್ತು ಕೋಟೆ ಎಂಬ ಆರು ಅಂಗಗಳನ್ನು ಉಳ್ಳವನು ಅರಸರಲ್ಲಿ ಪುರುಷ ಸಿಂಹವೆಂದು ಕರೆಸಿಕೊಳ್ಳುತ್ತಾನೆ.
382. ಧೈರ್ಯ, ದಾನ, ಜ್ಞಾನ ಮತ್ತು ಪ್ರಯತ್ನ- ಈ ನಾಲ್ಕು ಗುಣಗಳಲ್ಲಿ ಯಾವಾಗಲೂ ಸೋಲದೆ ನಿರಂತರವಾಗಿರುವುದೇ ಅರಸನ ಗುಣಗಳೆನಿಸುವುದು.
383. (ಸದಾ) ಎಚ್ಚರ, ವಿದ್ಯೆ ಮತ್ತು ಪರಾಕ್ರಮ ಇವು ಮೂರೂ ನೆಲವಾಳುವವನನ್ನು ಬಿಟ್ಟು ಹೋಗಬಾರದು.
384. ಧರ್ಮವನ್ನು ಬಿಡದೆ ಧರ್ಮ ವಲ್ಲದುದನ್ನು ನೀಗಿ, ಪರಾಕ್ರಮದಲ್ಲಿ ಕುಗ್ಗದೆ ಅಭಿಮಾನ ಧನನಾಗಿರುವವನೇ ಅರಸು.
385. (ಐಶ್ವರ್ಯವನ್ನು) ಸಂಪಾದಿಸಿ, ಸೇರಿಸಿಟ್ಟು ಕಾಪಾಡಿ (ಸಮನಾಗಿ) ಹಂಚಲು ಬಲ್ಲವನೇ ಅರಸು.
386. ಕಾಣಲು ಸುಲಭನಾಗಿ, ಕಡುನುಡಿಗಳನ್ನು ಆಡದವನಾಗಿದ್ದರೆ, ಆ ಅರಸನ ಆಳ್ವಿಕೆಗೊಳಪಟ್ಟ ನಾಡನ್ನು ಲೋಕವೇ ಹೊಗಳುವುದು.
387. ಇನಿದಾದ ಮಾತುಗಳಿಂದ (ತಕ್ಕವರಿಗೆ) (ವಸ್ತುಗಳನ್ನು) ಉದಾರವಾಗಿ ಕೊಟ್ಟು ಕಾಪಾಡಬಲ್ಲ ಅರಸನಿಗೆ ಈ ಲೋಕವು ವಿಧೇಯವಾಗಿ, ಅವನು ಹೇಳಿದಂತೆ ನಡೆದುಕೊಳ್ಳುತ್ತದೆ.
388. (ತನ್ನ ಜನರಿಗೆ) ನ್ಯಾಯ ನೀಡಿ, ಕಾಪಾಡುವ ಅರಸನನ್ನು ಜನರು (ಪ್ರತ್ಯಕ್ಷ) ದೇವರೆಂದು ಗೌರವಿಸುವರು.
389. (ದೊರುವವರ) ಕಹಿ ಮಾತುಗಳನ್ನು ಕಿವಿಯಲ್ಲಿ ಕೇಳಿ ತಾಳಿಕೊಳ್ಳುವ ಗುಣವುಳ್ಳ ಅರಸನ ಕೃಪಾ ಛತ್ರದಡಿಯ ನೆರಳಲ್ಲಿ ಲೋಕವೇ ತಂಗುತ್ತದೆ.
390. ಕೊಡುವಿಕೆ (ದಾನ), ಅನುಗ್ರಹ, ಸಮನ್ಯಾಯ, ಆಶ್ರಿತ ಜನರ ರಕ್ಷಣೆ ಈ ನಾಲ್ಕು (ಗುಣಗಳನ್ನು) ಉಳ್ಳ ಅರಸನು ಅರಸರಿಗೆಲ್ಲಾ ಬೆಳಕಿನಂತೆ ಇರುವನು.

ಅಧ್ಯಾಯ 40 ಶಿಕ್ಷಣ

391. ಕಲಿಯಬೇಕಾದ ಯೋಗ್ಯತೆಯುಳ್ಳ ಕಲಿಕೆಯನ್ನು ದೋಷವಿಲ್ಲದೆ ಕಲಿಯ ಬೇಕು. ಕಲಿತ ನಂತರ ಕಲಿತ ವಿದ್ಯೆಗೆ ತಕ್ಕದಾದ ಮಾರ್ಗದಲ್ಲಿ ನಿಲ್ಲಬೇಕು.
392. ಗಣಿತ ಮತ್ತು ಅಕ್ಷರಗಳು ಇವೆರಡೂ (ಕಲೆಗಳೂ) ಮನುಷ್ಯನ ಬಾಳಿಗೆ ಕಣ್ಣುಗಳಿದ್ದಂತೆ ಎಂದು ಹೇಳುವರು.
393. ಕಲಿತವರೇ ಕಣ್ಣುಳ್ಳವರು; ಕಲಿಯದವರ ಮುಖದಲ್ಲಿರುವ ಎರಡು ಕಣ್ಣುಗಳೂ ಹುಣ್ಣಿದ್ದಂತೆ.
394. ಬೆರೆತಾಗ ಸಂತೋಷ ತರುವುದು, ಅಗಲಿದಾಗ ನೆನೆಯುವಂತೆ ಮಾಡುವುದು ಇದೇ ವಿದ್ವಜ್ಜನರ ಕಲೆ.
395. ಐಶ್ವರ್ಯವಂತರ ಮುಂದೆ ಇಲ್ಲದವರು ನಿಲ್ಲುವಂತೆ, ಕಲಿತವರ ಮುಂದೆ ದೈನ್ಯದಿಂದ ಬಾಗಿನಿಂತು ಕಲಿತವರೇ ಶ್ರೇಷ್ಠರು; ಹಾಗೆ ಕಲಿಯದವರು ಕೀಳು ಜನರು.
396. ಮಳಲು ತೋಡಿದ ಪ್ರಮಾಣಕ್ಕೆ ಬಾವಿಯಲ್ಲಿ ನೀರು ತುಂಬುವಂತೆ ಮನುಷ್ಯರು ಕಲಿತ ವಿದ್ಯೆಯ ಪ್ರಮಾಣಕ್ಕೆ ಅರಿದು ಸಂಪಾದಿಸುತ್ತಾರೆ
397. ಕಲಿತವನಿಗೆ ಯಾವ ದೇಶವೇ ಆಗಲಿ, ಊರೇ ಆಗಲಿ, ತನ್ನ ದೇಶ, ಊರು ಎಂದಾಗುತ್ತದೆ. ಹಾಗಿರುವಾಗ ಸಾಯುವವರೆಗೂ ಒಬ್ಬನು ಕಲಿಯದೆ ಕಾಲಹರಣ ಮಾಡುವುದೇಕೆ?
398. ಒಂದು ಜನ್ಮದಲ್ಲಿ ತಾನು ಕಲಿತ ವಿದ್ಯೆ, ಏಳು ಜನ್ಮಗಳಲ್ಲಿಯೂ ತನ್ನ ನೆರವಿಗೆ ಬರುವುದು.
399. ತಾವು ಸಂತೋಷಪ್ಪಡುವುದಕ್ಕೆ ಕಾರಣವಾದ ವಿದ್ಯೆಯಿಂದ ಲೋಕವೂ ಸಂತೋಷಪ್ಪಡುವುದನ್ನು ಕಂಡು ವಿದ್ಯಾವಂತರು ಮತ್ತೆ ಮತ್ತೆ ಆ ವಿದ್ಯಯನ್ನು ಕಲಿಯಲು ಬಯಸುವರು.
400. ಒಬ್ಬನಿಗೆ ಕೇಡಿಲ್ಲದ ಸಿರಿಯೆಂದರೆ ವಿದ್ಯೆಯೇ; ಮತ್ತಾವುದೂ ಸಿರಿಯಲ್ಲ.

ಅಧ್ಯಾಯ 41. ಅವಿದ್ಯೆ

401. ಜ್ಞಾನವೃದ್ದಿಗೆ ಕಾರಣವಾದ ಗ್ರಂಥಗಳನ್ನು ಓದದೆ ಕಲಿತವರ ಸಭೆಯಲ್ಲಿ ಮಾತನಾಡುವುದು, ಚದುರಂಗದ ಮನೆಯಿಲ್ಲದೆ ಪಗಡೆಯಾಡಿದಂತೆ.
402. ಕಲಿಯದವನು ಕಲಿತವರ ಸಭೆಯಲ್ಲಿ ಮಾತನಾಡಬಯಸುವುದು ಮೊಲೆಗಳೆರಡೂ ಇಲ್ಲದ ಹೆಣ್ಣು, ತನ್ನ ಹೆಣ್ತನದ ಬಯುಕೆಯನ್ನು ತೀರಿಸಿಕೊಳ್ಳಲು ವ್ಯಕ್ತ ಪಡಿಸಿದಂತೆ.
403. ಕಲಿತವರ ಮುಂದೆ ಮಾತನಾಡದೆ ಸುಮ್ಮನಿದ್ದರೆ ಕಲಿಯದವರೂ ಬಹಳ ಒಳ್ಳೆಯವರೇ ಎನಿಸಿಕೊಳ್ಳುತ್ತಾರೆ.
404. ಕಲಿಯದವನ ಅರಿವು ಬಹಳ ಉತ್ತಮವಾಗಿದ್ದರೂ ಜ್ಞಾನಿಗಳು (ಅದನ್ನು) ಒಪ್ಪಿಕೊಳ್ಳುವುದಿಲ್ಲ.
405. ಕಲಿಯದವನೊಬ್ಬನ ಯೋಗ್ಯತೆಯು, ಕಲಿತವರ ಸಭೆಯಲ್ಲಿ ಮಾತಾಡುವಾಗ ಬಾಡಿಹೋಗಿ ಕೆಡುತ್ತದೆ.
406. ಕಲಿಯದವರು ಉಸಿರೊಂದಿಗೆ ಬದುಕ್ಕಿದ್ದರೂ ಫಲ ಬಿಡದ ಬರಡು ನೆಲಕು ಸಮಾನರು.
407. ನಯವೂ, ಗಾಂಭೀರ್ಯವೂ, ಸೂಕ್ಷ್ಮವಾದ ಅರಿವೂ ಇಲ್ಲದವನ ಚೆಲುವು ಮತ್ತು ಒಳ್ಳೆಯತನಗಳು ಮಣ್ಣಿಂದ ಮಾಡಿ ಸುಂದರವಾಗಿ ಅಲಂಕರಿಸಿದ ಪ್ರತಿವ್ಕೆಯಂತೆ.
408. ಕಲಿತವರ ಬಡತನ ತರುವ ದುಃಖಕ್ಕಿಂತ ಕೀಳಾದುದು ಕಲಿಯದವರ ಶ್ರಿಮಂತಿಕೆಯು.
409. ಕಲಿಯದವರು ಮೇಲಾದ ವಂಶದಲ್ಲಿ ಹುಟ್ಟಿದವರಾದರೂ, ಕೀಳು ವಂಶದಲ್ಲಿ ಹುಟ್ಟಿದ ಕಲಿತವರ ಹಿರಿಮೆಗೆ ಸಮಾನರಲ್ಲ.
410. ಅರಿವು ಬೆಳೆಗುವ ಗ್ರಂಥಗಳನ್ನು ಓದಿಕೊಂಡವರ ಮುಂದೆ ಕಲಿಯದವರು ಮನುಷ್ಯರ ಮುಂದಿನ ಪ್ರಾಣಿಗಳಂತೆ.

ಅಧ್ಯಾಯ 42. ಕೇಳುವಿಕೆ

411. ಕಿವಿಯಿಂದ ಕೇಳರಿಯುವ ಸಿರಿ ಸಿರಿಯೊಳಗೆ ಸಿರಿಯೆನಿಸುವುದು; ಆ ಸಿರಿಯು ಸಿರಿಗಳಲ್ಲೆಲ್ಲಾ ಶ್ರೇಷ್ಠವಾದುದು.
412. ಕಿವಿಗೆ ಆಹಾರ ಇಲ್ಲವೆಂದಾದ ಮೇಲೆ ಹೊಟ್ಟೆಗೂ ಸ್ವಲ್ಪವೇ ಆಹಾರ ಸಾಕು.
413. ಕಿವಿಗೆ ಆಹಾರವಾದ ಕೇಳುವ ಗುಣವನ್ನು ಹೊಂದಿರುವವರು, ನೆಲದಲ್ಲಿ (ಬಾಳಿದರೂ) ಹವಿಸ್ಸನ್ನು ಉಣ್ಣುವ ದೇವರಿಗೆ ಸಮಾನರು.
414. ಕಲಿಯದವನಾದರೂ  ಕಲಿತವರಿಂದ ಕೇಳಿ ಅರಿಯಬೇಕು. ಅದು ಒಬ್ಬನಿಗೆ ಕಷ್ಟಕಾಲದಲ್ಲ ಊರುಗೋಲಾಗಿ ಆಧಾರವೆನಿಸುವುದು.
415. ಒಳ್ಳೆಯ ನಡೆಯುಳ್ಳ ಜಾಣರ ಸೊಲ್ಲುಗಳು, ಇಳಿಜಾರಾದ ಕುಸಿಯುವ ನೆಲದಲ್ಲಿ ಊರುಗೋಲಿನಂತೆ, ಬಾಳಿನಲ್ಲಿ ನೆರವಾಗುವುವು.
416. ಎಷ್ಟೇ ಕಿರಿದಾದರೂ ಒಳಿತನ್ನು ಕೇಳರಿಯುಬೇಕು; ಕೇಳಿದ ಪ್ರಮಾಣಕ್ಕನು ಗುಣವಾಗಿ ಅದು ತುಂಬಿದ ಹಿರಿಮೆಯನ್ನು ತರುವುದು.
417. (ಗ್ರಂಥಗಳನ್ನು ಓದಿ) ಸೂಕ್ಷ್ಮವಾಗಿ ಅರಿತು, ಬೇರೆಯವರಿಂದಲೂ ಕೇಳಿ ತಿಳಿದುಕೊಂಡವರು, ಒಂದು ವಿಷಯವನ್ನು ತಪ್ಪಾಗಿ ಗ್ರಹಿಸಿದ್ದರೂ, ಅದನ್ನು ವ್ಯಕ್ತಪಡಿಸುವಾಗ ದಡ್ಡತನವನ್ನು ತೋರುವುದಿಲ್ಲ.
418. ಕೇಳಿ, ಕೇಳಿ ಸಂಸ್ಕಾರಗೊಳ್ಳದ ಕಿವಿ, ಇದ್ದೂ ಕಿವುಡಾದಂತೆ.
419. ಸುಸಂಸ್ಕೃತ ವಿಚಾರಗಳನ್ನು ಕೇಳರಿಯದವರು, ವಿನಯಪರವಾದ ಮಾತುಗಳನ್ನಾಡುವುದು ಸಾಧ್ಯವಿಲ್ಲ.
420. ಕಿವಿಯಿಂದ ಕೇಳುವ ಸವಿಯಿಲ್ಲದೆ, ಬಾಯ ಸವಿ ಮಾತ್ರ ತಿಳಿದವರು ಸತ್ತರೇನು, ಬದುಕ್ಕಿದ್ದರೇನು?

ಅಧ್ಯಾಯ 43. ಅರಿವು

421. ಅರಿವು ಎನ್ನುವುದು ಅಳಿವುಂಟಾಗದಂತೆ ರಕ್ಷಿಸುವ ಆಯುಧ; ಅಲ್ಲದೆ ಶತ್ರುಗಳಿಗೂ ಎದುರಿಸಲಾಗದ ಭದ್ರವಾದ ಕೋಟೆ ಎನಿಸುವುದು.
422. ಮನಸ್ಸನ್ನು ಹೋದೆಡೆಗೆಲ್ಲಾ ಹೋಗಲು ಬಿಡದೆ, ಕೆಟ್ಟ ವಿಚಾರಗಳಿಂದ ದೂರ ಮಾಡಿ, ಒಳ್ಳೆಯ ಮಾರ್ಗದಲ್ಲಿ ಒಯ್ಯುವುದೇ ಅರಿವು.
423. ಯಾವ ವಿಷಯವನ್ನೇ ಆಗಲಿ, ಯಾರಿಂದ ಕೇಳಿ ತಿಳಿದುಕೊಂಡರೂ, ಆ ವಿಷಯದ ಸತ್ಯವನ್ನು ಕಂಡುಕೊಳ್ಳುವುದೇ ಶುದ್ಧವಾದ ಅರಿವು.
424. ತಾನು ಒಂದು ವಿಷಯವನ್ನು ಹೇಳುವಾಗ, ಅದು ಜೆನ್ನಾಗಿ ಪ್ರತಿಫಲಿಸುವಂತೆ ಸರಳವಾಗಿ, ಮನಮುಟ್ಟುವಂತೆ ಹೇಳಿ, ಇತರರಿಂದ ತಿಳಿದ ವಿಷಯಗಳಲ್ಲಿರುವ ಸೂಕ್ಷ್ಮ ವಿಚಾರಗಳನ್ನು ಕಂಡುಕೊಳ್ಳುವುದೇ ಅರಿವು.
425. ಲೋಕದಲ್ಲಿ ಮಹನೀಯರಾದವರ ಸ್ನೇಹ ಮಾಡುವುದು, ಆ ಸ್ನೇಹವು ಕಮಲದ ಹೂವಿನಂತೆ ಒಮ್ಮೆ ಅರಳುವುದಾಗಲೀ, ಮತ್ತೊಮ್ಮೆ ಮುಚ್ಚಿಕೊಳ್ಳುವುದಾಗಲೀ ಇರದೆ, ಸದಾ ಒಂದೇ ಸಮನಾಗಿರುವಂತೆ ಮಾಡುವುದು ಅರಿವು.
426. ಲೋಕವು ಹೇಗೆ ನಡೆದುಕೊಳ್ಳುವುದೋ ಅದಕ್ಕೆ ಹೊಂದಿಕೊಂಡಂತೆ ತಾನೂ ಬಾಳುವುದೇ ಅರಿವು.
427. ಅರಿವುಳ್ಳವರು ಮುಂದೆ ಆಗುವುದನ್ನು ಅರಿಯಬಲ್ಲರು; ಅರಿವಿಲ್ಲದವರು ಅದನ್ನರಿಯಲು ಅಸಮರ್ಥರು.
428. ಅಂಜಬೇಕಾದ ವಿಷಯಗಳಲ್ಲಿ ಹೆದರದಿರುವುದು ಮೂರ್ಖತನವೆನ್ನಿಸುವುದು; ಅಂಜಬೇಕಾದ ವಿಷಯಗಳಲ್ಲಿ ಅಂಜಿ ನಡೆದುಕೊಳ್ಳುವುದೇ ಅರಿವುಳ್ಳವರ ಧರ್ಮ.
429. ಮುಂದೆ ಬರುವುದನ್ನು ಮೊದಲೇ ತಿಳಿದುಕೊಂಡು, ತಮ್ಮನ್ನು ಕಾದುಕೊಳ್ಳಬಲ್ಲ ಅರಿವುಳ್ಳವರಿಗೆ, ತತ್ತರಿಸುವಂತೆ ಬರುವ ಕಷ್ಟ ನೋವುಗಳೊಂದೂ ಇರುವುದಿಲ್ಲ.
430. ಅರಿವುಳ್ಲವರು (ದರಿದ್ರರಾಗಿದ್ದರೂ) ಎಲ್ಲವನ್ನೂ ಉಳ್ಳವರು; ಅರಿವಿಲ್ಲದವರು, ಎಲ್ಲವನ್ನು ಉಳ್ಳವರಾಗಿದ್ದರೂ ಏನೂ ಇಲ್ಲದ ದರಿದ್ರರೇ.

ಅಧ್ಯಾಯ 44. ತಪ್ಪು ತಿದ್ದಿಕೊಳ್ಳುವುದು

431. ಗರ್ವ, ಕೋಪ, ಕಾಮಗಳೆಂಬ (ದೋಷಗಳು) ಇಲ್ಲದವರ ಬಾಳಿನಲ್ಲಿ ಕಾಣುವ ಹಿರಿಮೆಯು ಮೇಲು ಮಟ್ಟದಾಗಿರುವುದು.
432. ಲೋಭ, ಗೌರವ ತಾರದ ಸ್ವಾಭಿಮಾನ, ಅರ್ಥವಿಲ್ಲದ ಸಂತೋಷ ಇವೆಲ್ಲವೂ ಅರಸನಲ್ಲಿರುವ ದೋಷಗಳೆನಿಸುವುವು.
433. ನಿಂದೆಗೆ ನಾಚುವವರು, ತೆನೆಯ ಕಾಳಿನಷ್ಟು ಅಲ್ಪವಾದ ಅಪರಾಧ ತಮ್ಮಿಂದ ನಡೆದರೂ, ಅದನ್ನು ಹನೆಯಷ್ಟು (ತಾಳೆಮರದಷ್ಟು) ದೊಡ್ಡದಾಗಿ ಭಾವಿಸುವರು.
434. ಅಪರಾಧ ಮಾಡದಿರುವುದನ್ನೇ ಧ್ಯೇಯವಾಗಿ ಕಾದುಕೊಳ್ಲಬೇಕು. ಏಕೆಂದರೆ ಅಪರಾಧವೇ ಅಳಿವನ್ನು ತರುವಂಥ ಹಗೆ.
435. ಅಪರಾಧವುಂಟಾಗುವ ಮುನ್ನವೇ ಬರದಂತೆ ಕಾದುಕೊಳ್ಲದಿರುವವನ ಬಾಳು; ಬೆಂಕಿಯ ಮುಂದಿರುವ ಹುಲ್ಲಿನ ಬಣವೆಯಂತೆ ನಾಶವಾಗುವುದು.
436. ಮುಂದಾಗಿ ತನ್ನ ದೋಷಗಳನ್ನು ನಿವಾರಿಸಿಕೊಂಡು, ಬೇರೆಯವರ ದೋಷಗಳನ್ನು ಸೂಕ್ಷ್ಮವಾಗಿ ಕಾಣಬಲ್ಲ ಅರಸನಿಗೆ ಬೇರೇನು ದೋಷಗಳು ಸಂಭವಿಸುವುವು?
437. ಮಾಡಬೇಕಾದ ಒಳ್ಳೆಯ ಕಾರ್ಯಗಳನ್ನು ಮಾಡದೆ, ಇರುವ ಲೋಲುಪನ ಸಿರಿಯು, ಸಿರಿಯಾದ ಚಲಾವಣೆಯಿಲ್ಲದೆ ನಾಶವಾಗುವುದು.
438. ಪರರಿಗೆ ಕೊಡದೆ ಬಲವಾಗಿ ಅಂಟಿಕೊಳ್ಲುವ ಆಸೆಬುರುಕತನವು, ಬೇರೆ ಅಪರಾಧಗಳೊಂದಿಗೆ ಎಣಿಸಲ್ಪಡುವುದೂ ಇಲ್ಲ; ಅಂದರೆ- ಇದೇ ಮಿಗಿಲಾದ ಅಪರಾಧ ಎನಿಸಿ ಕೊಳ್ಳುತ್ತದೆ.
439. ಯಾವ ಕಾಲದಲ್ಲಿಯೂ, ತನ್ನನ್ನು ಮೇಲಾಗಿ ಭಾವಿಸಿ ಹೊಗಳಿಕೊಳ್ಲಬಾರದು. ಒಳಿತು ಫಲಿಸದ ಕೆಲಸಗಳನ್ನು ಬಯಸಲೂ ಬಾರದು.
440. ಅರಸನಾದವನು, ತಾನು ಬಯಸಿದುದನ್ನು ಇತರರಿಗೆ ತಿಳಿಯದಂತೆ ಅನುಬೋಗಿಸಬಲ್ಲವನಾದರೆ, ಹಗೆಗಳು ತನ್ನನ್ನು ಪಂಚಿಸಲು ಹೂಡಿದ ಉಪಾಯಗಳೆಲ್ಲ ಫಲಿಸದೆ ಹೋಗುವುವು.

ಅಧ್ಯಾಯ 45. ಹಿರಿಯರ ಆಶ್ರಯ

441. ಅರಸನಾದವನು ಧರ್ಮವನ್ನು ಅರಿತವನಾಗಿ, ಪಕ್ವವಾದ ಅರಿವುಳ್ಲವರ ಗೆಳೆತನವನ್ನು ವಿಚಾರಮಾಡಿ ಸಂಪಾದಿಸಿಕೊಳ್ಳಬೇಕು.
442. ಬಂದ ಸಂಕಟಗಳನ್ನು ಪರಿಹರಿಸಿಕೊಂಡು, ಅವು ಮತ್ತೆ ಬಾರದಂತೆ ಮುಂದಾಗಿ ತಮ್ಮನ್ನು ಕಾದುಕೊಳ್ಳುವ ಗುಣವುಳ್ಳ ಜನರನ್ನು ಅರಸನು, ಆರೈಸಿ ಗೆಳೆತನ ಮಾಡಬೇಕು.
443. ಬಲ್ಲವರಾದ ಹಿರಿಯರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವುದು, (ಅರಸನಿಗೆ) ಅಸಾಧ್ಯವಾದ ಕಾರ್ಯಗಳಲ್ಲೆಲ್ಲ ಅತಿ ಕಠಿಣವಾದುದು.
444. ತಮಗಿಂತ ಅರಿವಿನಲ್ಲಿ ಹಿರಿಯರಾದವರನ್ನು ತಮ್ಮವರನ್ನಾಗಿ ನಡೆಸಿಕೊಳ್ಳುವುದು, ಕಠಿಣವಾದ ಕಾರ್ಯಗಳಲ್ಲೆಲ್ಲ ಮೇಲಾದ ಕಾರ್ಯವೆನಿಸುವುದು.
445. ಸೂಕ್ಷ್ಮ ಬುದ್ದಿಯುಳ್ಳವರನ್ನು ಲೋಕವು ಕಣ್ಣಾಗಿ ನಡೆಸಿಕೊಳ್ಳುವುದರಿಂದ, ಅಂಥವರನ್ನು ಅರಸನು, ಸೂಕ್ಷ್ಮವಾಗಿ ಗ್ರಹಿಸಿ, (ತನ್ನ ಮಂತ್ರಾಲೋಚನೆಯಲ್ಲಿ) ಸ್ವೀಕರಿಸಬೇಕು.
446. ತಕ್ಕವರಾದ ಹಿರಿಯರ, ಒಡನಾಟದಲ್ಲಿ ನಡೆದುಕೊಳ್ಳುವ ಅರಸನಿಗೆ ಅವನ ಹಗೆಗಳಿಂದ ಯಾವ ಕೇಡೂ ಉಂಟಾಗುವುದಿಲ್ಲ.
447. ಕಂಡಿತವಾದಿಗಳಾದ ಜ್ಞಾನಿಗಳ ಸ್ನೇಹವನ್ನು ಕೊಂಡು ಆಳುವ ಅರಸನನ್ನು ನಾಶಪಡಿಸುವ ಎದೆಗಾರಿಕೆ ಯಾರಿಗಿದೆ?
448. ಕಂಡಿತವಾದಿಗಳಾದ ಜ್ಞಾನಿಗಳ ಬೆಂಬಲವಿಲ್ಲದೆ, ಸ್ವೇಚ್ಛೆಯಾಗಿ ಆಳುವ ಅರಸನು, ನಾಶಪಡಿಸುವ ಹಗೆಗಳಿಲ್ಲದೆಯೂ, ಕೆಡುತ್ತಾನೆ.
449. ಬಂಡವಾಳವಿಲ್ಲದವರಿಗೆ ಲಾಭವೂ ಇಲ್ಲ; ಆಶ್ರಿತರಾದ ಜ್ಞಾನಿಗಳ ನೆರವಿಲ್ಲದರಸನಿಗೆ ನೆಲೆಯೂ ಇಲ್ಲ.
450. ಒಳ್ಳೆಯವರಾದ ಜ್ಞಾನಿಗಳ ಸಂಬಂಧವನ್ನು ಕಡಿದುಕೊಳ್ಳುವುದು, ಹಲವಾರು ಮುಂದಿಯ ಹಗೆಯನ್ನು ಕೊಳ್ಲುವುದಕ್ಕಿಂತ ಹತ್ತುಪಾಲು ಕೆಟ್ಟುದು.

ಅಧ್ಯಾಯ 46. ನೀಚರ ಸಹವಾಸ ಸೇರದಿರುವುದು

451. ನೀಚರ ಸಹವಾಸಕ್ಕೆ ಅಂಜುವುದು ದೊಡ್ಡವರ ಗುಣ; ಅಲ್ಪರಾದವರು ಮಾತ್ರ ನೀಚರ ಒಡನಾಟದಲ್ಲಿ ವಿಚಾರಮಾಡದೆ ತಮ್ಮನ್ನು ಒಪ್ಪಿಸಿಕೊಂಡು ಬಿಡುವರು.
452. ನೆಲದ ಗುಣದಿಂದ (ಹರಿಯುವ) ನೀರಿನ ಗುಣವೂ ಬದಲಾಗುತ್ತದೆ; ಅದೇ ರೀತಿ ಮನುಷ್ಯನ ತಿಳಿವಳಿಕೆ ಕೂಡ ಒಡನಾಟದ ಗುಣವನ್ನು ಹೊಂದಿಕೊಂಡಿರುತ್ತದೆ.
453. ಮನುಷ್ಯರಿಗೆ ಸ್ವಾಭಾವಿಕವಾದ ತಿಳಿವಳಿಕೆ ಮನಸ್ಸಿನಿಂದ ಉಂಟಾಗುತ್ತದೆ; ಹಾಗೆಯೇ ‘ಅವನು ಇಂಥವನು’ ಎಂಬ ಮಾತು ಒಡನಾಟದಿಂದ ಕೇಳಿಬರುತ್ತದೆ.
454. ಮನುಷ್ಯನ ತಿಳಿವಳಿಕೆಯು ಅವನ ಮನಸ್ಸಿನ ಶಿಶುವೆಂದು ತೋರಿದರೂ ಅದು ವ್ಯಕ್ತವಾಗುವುದು ಅವನ ಒಡನಾಟದಿಂದಲೇ.
455. ಮನ:ಶುದ್ದಿ, ನಡೆವಳಿಕೆಯ ಶುದ್ದಿ ಇವೆರಡೂ ಒಡನಾಟದ ಶುದ್ದಿಯನ್ನು ಹೊಂದಿಕೊಂಡು ಬರುತ್ತವೆ.
456. ಮನಶುದ್ದಿಯುಳ್ಳವರಿಗೆ ಕುಲಸಂಪನ್ನತೆಯೂ ಒಳ್ಳೆಯದಾಗಿಯೇ ಬರುವುದು; ಒಡನಾಟದ ಶುದ್ದಿಯುಳ್ಳವರಿಗೆ ಒಳ್ಳೆಯದಾಗದ  ಕಾರ್ಯವೇ ಇಲ್ಲ.
457. ಮನಃಶುದ್ದಿಯು ಬಾಳಿಗೆ ಸಿರಿಯಾಗಿ ನಿಲ್ಲುತ್ತದೆ; ಒಡನಾಟದ ಶುದ್ದಿಯು ಎಲ್ಲಾ ತರದ ಕೀರ್ತಿಗೂ ಕಾರಣವಾಗುತ್ತದೆ.
458. ಸ್ವಾಭಾವಿಕವಾದ ಒಳ್ಲೆಯತನವಿದ್ದರೂ ಸಂಪನ್ನರಾದವರಿಗೆ ಒಳ್ಳೆಯ ಒಡನಾಟವು ಅದನ್ನು ಬಲಪಡಿಸುವ ಶಕ್ತಿಯಾಗಿ ನಿಲ್ಲುತ್ತದೆ.
459. ಒಳ್ಳೆಯ ಮನಸ್ಸಿನಿಂದ ಮರುಭವದಲ್ಲಿ ಸುಖ ಪ್ರಾಪ್ತಿಯಾಗುವುದು; ಒಳ್ಳೆಯ ಒಡನಾಟದಿಂದ ಅದು ಮತ್ತಷ್ಟು ಬಲಗೊಳ್ಳುವುದು.
460. ಒಳ್ಳೆಯ ಒಡನಾಟಕ್ಕಿಂತ ಮಿಗಿಲಾದ ರಕ್ಷೆಯೂ ಇಲ್ಲ; ಕೆಟ್ಟ ಒಡನಾಟಕ್ಕಿಂತ ದುಃಖಕ್ಕೀಡು ಮಾಡುವ ಹಗೆಯೂ ಇಲ್ಲ.

ಅಧ್ಯಾಯ 47. ತಿಳಿದು ವರ್ತಿಸುವ ಬಗೆ

461. ಒಂದು ಕೆಲಸಕ್ಕೆ ತೊಡಗುವ ಮುನ್ನ, ಆ ಕೆಲಸದಿಂದ ಉಂಟಾಗುವ ವ್ಯಯವನ್ನೂ ಬರುವ ಆದಾಯವನ್ನೂ ತೂಗಿ ನೋಡಿ, ಬರಲಿರುವ ಲಾಭವನ್ನು ಪರಾಮರ್ಶಿಸಿ, ತೊಡಗಬೇಕು.
462. ಒಳ್ಳೆಯ ಒಡನಾಟವನ್ನು ಆಯ್ದುಕೊಂಡು, ಮಾಡುವ ಕೆಲಸದ ಬಗ್ಗೆ ವಿವರವಾಗಿ ಆಲೋಚಿಸಿ ತೊಡಗುವವರಿಗೆ ಕಷ್ಟಸಾಧ್ಯವಾದ ಸಂಗತಿ ಎಂಬುದೊಂದೂ ಇಲ್ಲ.
463. ತಿಳಿದವರು ಮುಂದೆ ಬರಲಿರುವ ಸಿರಿಯನ್ನು ಬಯಸಿ, ಕೈಯಲ್ಲಿರುವ ಬಂಡವಾಳವನ್ನೇ ಹಾಳುಮಾಡಿಕೊಳ್ಳುವ ಕೆಲಸವನ್ನು (ಎಂದಿಗೂ) ಕೈಗೊಳ್ಳುವುದಿಲ್ಲ.
464. ಅಪನಿಂದೆಗೆ ಗುರಿಯಾಗುವಂಥ ಕೆಲಸಗಳಿಗೆ ಅಂಜುವವರು, ಆಲೋಚನೆ ಮಾಡದೆ ತಿಳಿವಿಲ್ಲದ ಕಾರ್ಯಗಳಲ್ಲಿ ತೊಡಗುವುದಿಲ್ಲ.
465. (ಅರಸನಾದವನು) ತಾನು ಕೈಗೊಂಡ ಕೆಲಸದ (ಹೋರಾಟದ) ಉಪಾಯಗಳನ್ನು ಚೆನ್ನಾಗಿ ವಿಚಾರಮಾಡದೆ ತೊಡುಗವುದರಿಂದ, ಹಗೆಗಳ ಪ್ರಾಬಲ್ಯವನ್ನು ನೀರೆರೆದು ಪೋಷಿಸಿದ ಹಾಗಾಗುವುದು.
466. (ಅರಸನಾದವನು) ಮಾಡಲು ಯೋಗ್ಯವಲ್ಲದನ್ನು ಮಾಡಿದರೆ, ಕೆಡುವನು; ಮಾಡಲು ಯೋಗ್ಯವಾದ ಕೆಲಸಗಳನ್ನು ಮಾಡದೆಯೇ ಬಿಟ್ಟರೂ ಕೆಡುವನು.
467. ಆಲೋಚನೆ ಮಾಡಿದ ಮೇಲೇ ಕೆಲಸವನ್ನು ಕೈಗೊಳ್ಳುವ ನಿರ್ಧಾರಕ್ಕೆ ಬರಬೇಕು. ಮೊದಲೇ ಕೆಲಸ ಮಾಡಲು ನಿರ್ಧರಿಸಿ ಆಮೇಲೆ ಆ ಬಗ್ಗೆ ‘ಆಲೋಚನೆ ಮಾಡೋಣ’ ಎನ್ನುವುದು ದೋಷವೆನಿಸುವುದು.
468. ಸರಿಯಾದ ಮಾರ್ಗದಲ್ಲಿ ನಡೆಸದ ಪ್ರಯತ್ನವು ಹಲವರು ಬೆಂಬಲವಾಗಿನಿಂತು, ಅದನ್ನು ಪೋಷಿಸಿದರೂ ಫಲಸುವುದಿಲ್ಲ.
469. ಅವರವರ ಸ್ವಭಾವಗಳನ್ನು ಅರಿತು ಅವರವರಿಗೆ ಒಪ್ಪಿಗೆಯಾಗುವಂತೆ ಕೆಲಸ ಮಾಡದಿದ್ದರೆ, ಒಳ್ಳೆಯ ಕಾರ್ಯಗಳಲ್ಲಿಯೂ ತಪ್ಪು ಸಂಭವಿಸುವುದುಂಟು.
470. ಲೋಕವು ತನ್ನೊಂದಿಗೆ ಹೊಂದದುದನ್ನು ಸ್ವೀಕರಿಸುವುದಿಲ್ಲ, ಅದರಿಂದ ನಿಂದೆಯನ್ನು ತಾರದ ಕೆಲಸವನ್ನು ಆಲೋಚಿಸಿ ಮಾಡಬೇಕು.

ಅಧ್ಯಾಯ 48. ಬಲದ ಅರಿವು

471. ಅರಸನು ತಾನು ಕೈಗೊಂಡ ಕಾರ್ಯದ ಬಲ, ತನ್ನ ಬಲ, ತನ್ನ ಹಗೆಯ ಬಲ ಮತ್ತು ಇಬ್ಬಣ್ಣದ ಬೆಂಬಲದ ಬಲ- ಇವೆಲ್ಲವನ್ನೂ ತೂಗಿ ನೋಡಿ ನಂತರ ಕಾರ್ಯಕ್ಕೆ, ಕೈಹಾಕಬೇಕು.
472. (ಎದುರಾಳಿಗಳನ್ನು ಎದುರಿಸುವ ಮುನ್ನ) ತನ್ನ ಬಲದ ಸಾಮರ್ಥ್ಯವನ್ನು ತಿಳಿದು, ಅದರಲ್ಲಿ ದೃಡವಾಗಿ ಮನಸ್ಸಿಟ್ಟು ನಡೆಯುವವರಿಗೆ ಅಸಾಧ್ಯವಾದುದೇನೂ ಇಲ್ಲ.
473. ತಮ್ಮಲ್ಲಿರುವ ಬಲದ ಮಿತಿಯನ್ನು ಅರಿಯದವರು, ಉತ್ಸಾಹದಿಂದ (ಕಾಳಗದಲ್ಲಿ) ಮುನ್ನುಗ್ಗಿ ನಡುವಿನಲ್ಲಿಯೇ ಮುರಿದು ಬಿದ್ದವರು ಹಲವರು.
474. ನೆರೆಯವರೊಂದಿಗೆ ಹೊಂದಿಕೊಂಡು ಬಾಳದೆ, ತನ್ನ ಬಲದ ಮಿತಿಯನ್ನು ತಿಳಿಯದೆ, ತನ್ನ ಹಿರಿಮೆಯನ್ನು ಹೊಗಳಿಕೊಳ್ಳುವ ಅರಸನು ಕೊಡಲೇ ಕೆಡುತ್ತಾನೆ.
475. ನವಿಲುಗರಿ ತುಂಬಿದ ಗಾಡಿಯೇ ಆದರೂ, ಅದನ್ನು ಅಳತೆ ಮೀರಿ ತುಂಬಿದರೆ, ಗಾಡಿಯ ಅಚ್ಚು ಮುರಿದು ಹೋಗುತ್ತದೆ.
476. ತುದಿಕೊಂಬೆಯನ್ನು ಏರಿದವರು, ಅದಕ್ಕೂ ಮುಂದೆ ಏರಿಹೋಗಲು ಸಾಹಸ ಮಾಡಿದರೆ, ಪ್ರಾಣಕ್ಕೆ ಸಂಚಕಾರವುಂಟಾಗುತ್ತದೆ.
477. ಕೊಡುವ ಸಾಮರ್ಥ್ಯವನ್ನರಿತು (ಇತರರಿಗೆ) ದಾನಮಾಡಬೇಕು; ಅದು ಸಿರಿಯನ್ನು ಕಾದುಕೊಂಡು ಬಾಳುವ ಮಾರ್ಗವೆನಿಸುವುದು.
478. ಬರುವ ಆದಾಯವು ಅಲ್ಪವಾಗಿದ್ದರೂ, ಮಾಡುವ ವ್ಯಯವು ಮಿತಿ ಮೀರದೆ ಇದ್ದರೆ, ಅದರಿಂದ ಕೇಡಿಲ್ಲ.
479. ಮಿತಿಯರಿತು ಬಾಳದಿರುವವನ ಸೊತ್ತು, ಇರುವಂತೆ ತೋರಿ, ಕ್ರಮೇಣ ಇಲ್ಲವಾಗಿ ಕೆಡುತ್ತದೆ.
480. ತನ್ನಲ್ಲಿರುವ ಸಿರಿಯ ಮಿತಿಯನ್ನು ಲೆಕ್ಕಿಸದೆ, ಊದಾರಗುಣದಿಂದ ವ್ಯಯಮಾಡಿದರೆ, ಆ ಸಿರಿಯು, ಅತಿ ವೇಗದಲ್ಲಿ ಕೆಡುತ್ತದೆ.

No comments:

Post a Comment